ಗಾದೆಗಳು ಮತ್ತು ಅದರ ಸಾರಾಂಶ-5

1.ಕೈ ಕೆಸರಾದರೆ ಬಾಯಿ ಮೊಸರು
ಈ ಗಾದೆಯ ಮಾತಿನ ಅರ್ಥವೆಂದರೆ ಕಷ್ಟ ಪಟ್ಟರೆ ಸುಖ ಎಂಬುದನ್ನು ಸೂಚಿಸುತ್ತದೆ. ಕನಕದಾಸರು ''ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ '' ಪ್ರತಿಯೊಬ್ಬರೂ ಜೀವನೋಪಾಯಕ್ಕಾಗಿ ಒಂದೊಂದು ಕೆಲಸವನ್ನು ಅವಲಂಬಿಸಬೇಕಾಗುತ್ತದೆ. ಉಳುವ ಕೆಲಸವನ್ನು ರೈತರು, ನೆಯ್ಯುವ ಕಾರ್ಯವನ್ನು ನೇಕಾರರು ಹೀಗೆ ಪ್ರತಿಯೊಬ್ಬರು ತಮ್ಮ ತಮ್ಮ ಜೀವನ ನಿರ್ವಹಣೆಗೆ ಒಂದೊಂದು ಕೆಲಸವನ್ನು ಮಾಡುವಾಗ ಆ ಕೆಲಸದಲ್ಲಿ ಪ್ರತಿಫಲ ಇರುವ ಹಾಗೆಯೇ ಸಾಕಷ್ಟು ಕಷ್ಟ ನಷ್ಟಗಳೂ ಇರುತ್ತವೆ. ಆದರೆ ಕಷ್ಟಗಳು ಬರುವವೆಂದು ಕೆಲಸ ಮಾಡದೇ ಬದುಕಲಾಗದು. ಕೈ ಕೆಸರಾಗುವುದೆಂದು ರೈತ ಬೆಳೆಯನ್ನು ಬೆಳೆಯದಿರಲಾದೀತೇ ? ಬೆಳೆ ಇಲ್ಲದೇ ಊಟ ಮಾಡುವುದು ಹೇಗೆ ? ರೈತ ಕೈ ಕೆಸರನ್ನು ಗಮನಿಸದೇ ಮುಂದೆ ಸಿಗುವ ಪ್ರತಿಫಲದ ನಿರೀಕ್ಷೆಯು ಅವನನ್ನು ಕಷ್ಟ ಪಡಲು ಪ್ರೇರೇಪಿಸುತ್ತದೆ. ಬಸವಣ್ಣನವರು ಹೇಳುವಂತೆ ಕಾಯಕವೇ ಕೈಲಾಸವಾಗಿದೆ. ಪರಿಶ್ರಮದಿಂದ ಮಾತ್ರವೇ ವಿದ್ಯೆ ಎಂದು ಸಂತ ಕಬೀರದಾಸರು ಹೇಳಿದ್ದಾರೆ. ದುಡಿತವೇ ದುಡ್ಡಿನ ತಾಯಿ ಆದ್ದರಿಂದ ಪ್ರತಿಯೊಬ್ಬರೂ ಕಷ್ಟಪಟ್ಟು ದುಡಿಯಬೇಕು .ಉದ್ಯೋಗಿಯಾದರೆ ಮಾತ್ರ ಸಂಪತ್ತು ದೊರೆಯಲು ಸಾಧ್ಯ . ಆದ್ದರಿಂದ ಪ್ರತಿಯೊಬ್ಬರೂ ತಮ್ಮ ತಮ್ಮ ಕಾರ್ಯವನ್ನು ನಿಷ್ಠೆಯಿಂದ ಮಾಡಿದರೆ ಫಲ ದೊರೆಯಲು ಸಾಧ್ಯ.
2.ತುಂಬಿದ ಕೊಡ ತುಳುಕುವುದಿಲ್ಲ
ಕೊಡ ತುಂಬಿದ್ದರೆ ಸಾಧಾರಣಕ್ಕೆ ತುಳುಕುವ ಕಾರಣವಿಲ್ಲ . ಅರ್ಧಮರ್ಧ ಇರುವಾಗ ನಾವು ಸಹಜವಾಗಿ ಎತ್ತಿದರೆ ನೀರು ಮೇಲೆ ಚಿಮ್ಮಿ ನಮ್ಮ ಮುಖಕ್ಕೆ ಸಿಂಪಡಿಸಿದಂತಾಗುವುದು. ಈ ಗಾದೆಯನ್ನು ಜ್ಞಾನಿಗೂ ಅರೆಬರೆ ತಿಳಿದವನಿಗೂ ಇರುವ ವ್ಯತ್ಯಾಸ ತಿಳಿಸಲು ಬಳಸುತ್ತಾರೆ.ನಿಜವಾದ ಜ್ಞಾನಿಯಾದವನು ತನ್ನ ಜ್ಞಾನ ,ಹೆಸರು ,ಗೌರವವನ್ನು ತಾನೇ ಪ್ರಚಾರ ಮಾಡಿಕೊಳ್ಳಲು ಹೋಗುವುದಿಲ್ಲ . ಆದರೆ ಅರೆಬರೆ ಕಲಿತ ವ್ಯಕ್ತಿಗಳು ತಮ್ಮನ್ನು ಮಾಹಾ ಜ್ಞಾನಿಗಳು .ತಾನೇ ಸರ್ವ ಶ್ರೇಷ್ಠ ಎಂಬಂತೆ ಸಮಾಜದಲ್ಲಿ ವರ್ತಿಸುತ್ತಾರೆ. ರಾಮಕೃಷ್ಣ ಪರಹಂಸರಂತವರು ಆಲ್ಬರ್ಟ್ ಐನ್ ಸ್ಟೈನ್ ನಂತಹ ಮಹಾನ್ ವ್ಯಕ್ತಿಗಳಿಗೆ ತಮ್ಮನ್ನು ಪ್ರಚಾರಕ್ಕೆ ಒಳಪಡಿಸಿಕೊಳ್ಳಬೇಕಾದ ಆವಶ್ಯಕತೆಯೇ ಇರುವುದಿಲ್ಲ.ಸಂದರ್ಭ ಬಂದಾಗಲೆಲ್ಲ ಮಹಾತ್ಮರ ವ್ಯಕ್ತಿತ್ವ ತಾನೇ ತಾನಾಗಿ ವ್ಯಕ್ತವಾಗುತ್ತದೆ. ಅಲ್ಪವಿದ್ಯಾ ಮಹಾಗರ್ವಿಗಳು ಅರ್ಧ ತುಂಬಿದ ಕೊಡದ ಹಾಗೆ ಕೊಡವನ್ನೆತ್ತಿದ್ದರೆ ನೀರು ತುಳುಕುವಂತೆ ಆವಶ್ಯಕತೆ ಇಲ್ಲದಿದ್ದರೂ ತಮ್ಮನ್ನು ಪ್ರಚಾರಕ್ಕೆ ಒಳಪಡಿಸಿಕೊಳ್ಳುತ್ತಾರೆ.ಯಾವುದೇ ವಿಷಯದಲ್ಲಿ ಪೂರ್ಣ ಜ್ಞಾನ ಪಡೆಯಲು ಪ್ರಯತ್ನಿಸಬೇಕು .ಅರ್ಧ ಬೆಂದ ಇಟ್ಟಿಗೆಯಾಗಬಾರದು .ಸ್ವ ಪ್ರದರ್ಶನ ಮಾಡಿಕೊಳ್ಳುವುದು ,ಆತ್ಮ ಪ್ರಶಂಸೆ ಮಾಡಿಕೊಳ್ಳುವುದು ದೊಡ್ಡಸ್ತಿಕೆಯ ಲಕ್ಷಣವಲ್ಲ. ಪೂರ್ಣ ವಿಚಾರವನ್ನು ಅರಿತವರು ಪ್ರಚಾರಪ್ರಿಯರಾಗಿರುವುದಿಲ್ಲ.ಸಂಯುಮ ವುಳ್ಳವರಾಗಿರುತ್ತಾರೆ. ಆದರ್ಶಪ್ರಾಯರಾಗಿರುತ್ತಾರೆ.ಅರ್ಧ ತಿಳಿದುಕೊಂಡವರ ಮಾತಿನಲ್ಲಿ,ನಡೆನುಡಿಗಳಲ್ಲಿ ಸಂಯುಮವಿರಲಾರದು. ಈ ಗಾದೆ ಮಾತಿನಲ್ಲಿ ಜ್ಞಾನಿಗಳನ್ನು, ತುಂಬಿದ ಕೊಡಕ್ಕೂ ಅರ್ಧ ತಿಳಿದು ಪ್ರಚಾರ ಪ್ರಿಯರಾಗಿರುವವರನ್ನು ಅರ್ಧ ತುಂಬಿದ ಕೊಡಕ್ಕೂ ಹೋಲಿಸಲಾಗಿದೆ.
3.ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?
ಗಿಡ ಚಿಕ್ಕದಾಗಿರುವಾಗ ಅದನ್ನು ಬಾಗಿಸಬಹುದು .ಅದೇ ಅದು ಬೆಳೆದು ಗಟ್ಟಿಯಾಗಿ ಮರವಾದ ಮೇಲೆ ಅದನ್ನು ಬಗ್ಗಿಸಲು ಸಾಧ್ಯವಾಗುವುದಿಲ್ಲ.ಮನೆಯ ಮುಂದೆ ಅಲಂಕಾರಿಕವಾಗಿ ಬೆಳೆಸಬೇಕಾದ ಗಿಡವನ್ನು ಅದು ಚಿಕ್ಕದಿರುವಾಗಲೇ ನಮಗೆ ಬೇಕಾದ ಆಕಾರಕ್ಕೆ ಬಗ್ಗಿಸಬೇಕು .ಅದು ದೊಡ್ಡದಾದ ಮೇಲೆ ನಮಗೆ ಬೇಕಾದ ಆಕಾರಕ್ಕೆ ತರಲು ಆಗುವುದಿಲ್ಲ.ಹಾಗೆಯೇ ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳಬೇಕಾದ ಮಕ್ಕಳಿಗೆ ಚಿಕ್ಕವರಿರುವಾಗಲೇ ಜೀವನ ಮೌಲ್ಯಗಳನ್ನು ರೂಢಿಸುವ ಕಾರ್ಯವಾಗಬೇಕು. ಅವರಿಗೆ ಚಿಕ್ಕವರಿರುವಾಗಲೇ ಬುದ್ಧಿ ಹೇಳಬೇಕು ,ತಪ್ಪು ಮಾಡಿದರೆ ತಿದ್ದಿ ತಿಳುವಳಿಕೆ ನೀಡಬೇಕು. ಆದರೆ ಅವರು ಚಿಕ್ಕವರು ಎನ್ನುವ ಕಾರಣಕ್ಕೆ ಅವರ ತಪ್ಪುಗಳನ್ನು ತಿದ್ದದೇ ಹಾಗೆ ಬೆಳೆಯಲು ಬಿಟ್ಟರೆ ಮುಂದೆ ದೊಡ್ಡವರಾದಂತೆ ಅದೇ ತಪ್ಪುಗಳೇ ಅವರ ಪಾಲಿಗೆ ಒಪ್ಪುಗಳಾಗಿ ಮಾರ್ಪಟ್ಟು ಮುಂದೆ ತಿದ್ದ ಹೊರಟರೂ ಪ್ರಯೋಜನವಾಗುವುದಿಲ್ಲ. ಮನೆಯಲ್ಲಿ ಮಕ್ಕಳನ್ನು ಎಷ್ಟು ಪ್ರೀತಿಸಿದರೂ ಮುದ್ದಿಸಿದರೂ ಸರಿ ತಪ್ಪುಗಳ ಪ್ರಶ್ನೆ ಬಂದಾಗ ಅವರಿಗೆ ಅವರ ತಪ್ಪುಗಳನ್ನು ಮನಗಾಣಿಸಿ ಅವರನ್ನು ತಿದ್ದುವುದು ದೊಡ್ಡವರ ಆದ್ಯ ಕರ್ತವ್ಯವಾಗಿದೆ.ಮಗುವಿನ ತಪ್ಪುನಡುವಳಿಕೆಯನ್ನು , ಕೆಟ್ಟ ಸಹವಾಸಗಳನ್ನು ಬಾಲ್ಯದಿಂದಲೇ ತಿಳಿಸಿ ಸರಿಪಡಿಸಬೇಕು .ಇಲ್ಲವಾದರೆ ದೊಡ್ಡವರಾದ ಮೇಲೆ ಅವರು ಸಮಾಜದಲ್ಲಿ ಯಾವುದೇ ಪ್ರಯೋಜನಕ್ಕೆ ಬಾರದವರಾಗಿ ಬಾಳಬೇಕಾಗುತ್ತದೆ ಆಮೇಲೆ ಅವರನ್ನು ಸರಿ ಪಡಿಸಲು ಸಾದ್ಯವಾಗದೇ ಪಶ್ಚಾತ್ತಾಪ ಪಡುವ ಕಷ್ಟ ದೊಡ್ಡವರದಾಗುತ್ತದೆ ಎನ್ನುವುದು ಮೇಲಿನ ಗಾದೆ ಮಾತಿನ ಅರ್ಥವಾಗಿದೆ.
ರಿಂದ,
ನಿರ್ವಾಹಕ

(ಒಗಟು ಗಾದೆಗಳ ಪುಟ)

1 comment:

Post a Comment

ಗಾದೆಗಳು ಮತ್ತು ಅದರ ಸಾರಾಂಶ-11

1.ಹೆಣ್ಣು ಸಂಸಾರದ ಕಣ್ಣು ಈ ಗಾದೆಯಲ್ಲಿ ಸಂಸಾರದಲ್ಲಿ ಹೆಣ್ಣಿನ ಮಹತ್ವವನ್ನು ಹೇಳಿದೆ. ಹೆಣ್ಣಿಲ್ಲದ ಮೇಲೆ ಅದು ಸಂಸಾರವೇ ಅಲ್ಲ. ಮನುಷ್ಯನ ದೇಹಕ್ಕೆ ಕಣ್ಣು ಎಷ್ಟು ಮುಖ್...

">
">